ಪಾಠ 7
ಆತನಗಾಗಿ ಬದುಕುವ ನಮ್ಮ ಹೋರಾಟದಲ್ಲಿ ದೇವರು ಪರಿಣಾಮಕಾರಿ ಸಾಧನಗಳನ್ನು ನೀಡುತ್ತಾನೆ. ಅವುಗಳನ್ನು ಬಳಸದಿದ್ದರೆ, ನಾವು ವಿಫಲರಾಗುತ್ತೇವೆ.
ಜೀವನವು ಸಂಕೀರ್ಣವಾಗಿದೆ. ಕ್ರೈಸ್ತ ಧರ್ಮವು ನಿಮ್ಮನ್ನು ಮರೆಯಲ್ಲಿಟ್ಟು, ನಿಮಗೆ ನೋವಾಗದಂತೆ ತಡೆಯುವ ಧರ್ಮವಲ್ಲ. ಬದಲಿಗೆ, ದೇವರು ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿದ್ದಾನೆ ಮತ್ತು ನಾವು ಹುಟ್ಟಿದ ಕತ್ತಲೆಯಲ್ಲಿ ಆ ಜ್ವಾಲೆಯನ್ನು ಪ್ರದರ್ಶಿಸಲು ಹೇಳಿದ್ದಾನೆ. ಜಗತ್ತು ನಮ್ಮಿಂದ ನಿರೀಕ್ಷಿಸುವುದಕ್ಕಿಂತ ಭಿನ್ನವಾಗಿ ನಮ್ಮ ನೈಜ ಜೀವನವನ್ನು ಜೀವಿಸಲು ಆತನು ಹೇಳುತ್ತಾನೆ.
ನಾವು ಮತ್ತೆ ಜನಿಸಿದಾಗ, ನಮ್ಮ ಜೀವನದುದ್ದಕ್ಕೂ ನಮಗೆ ನಿರಂತರ ಪೋಷಣೆಯ ಅಗತ್ಯವಿರುತ್ತದೆ. ನಾವು ದಿನಕ್ಕೆ ಹಲವಾರು ಬಾರಿ ತಿನ್ನುತ್ತೇವೆ. ದಿನಕ್ಕೆ ಹಲವಾರು ಗಂಟೆಗಳ ಕಾಲ ಮಲಗುತ್ತೇವೆ. ಪ್ರತಿದಿನ ತುಂಬಾ ನೀರು ಕುಡಿಯುತ್ತೇವೆ. ಆಹಾರ, ನೀರು ಮತ್ತು ನಿದ್ರೆಯ ಆಧ್ಯಾತ್ಮಿಕ ಪ್ರತಿರೂಪಗಳು, ಬೈಬಲ್ ಅನ್ನು ಓದುವುದು, ಪ್ರಾರ್ಥಿಸುವುದು ಮತ್ತು ಇತರರೊಂದಿಗೆ ಆತನನ್ನು ಆರಾಧಿಸುವುದು.
ಜಗತ್ತು ಕೊಳಕಾಗಿದೆ. ನಾವು ಪರಿಶುದ್ಧರಾಗಿರಬೇಕು. ಬದುಕಿರುವಾಗ, ಪ್ರತಿದಿನ ನಮ್ಮ ಹೃದಯದ ಮೇಲೆ ಕೊಳಕನ್ನು ಎಸೆಯಲಾಗುತ್ತದೆ. ನಮ್ಮ ಕಣ್ಣುಗಳ ಮೂಲಕ ನಾವು ವಿಕೃತಿಯನ್ನು ನೋಡುತ್ತೇವೆ. ಕಿವಿಗಳ ಮೂಲಕ ಕೆಟ್ಟ ಪದಗಳನ್ನು ಕೇಳುತ್ತೇವೆ. ಕೈಗಳ ಮೂಲಕ ನಾವು ಮುಳ್ಳಿನ ನೋವು ಮತ್ತು ಸ್ನೇಹಿತರ ಮುಷ್ಟಿಯನ್ನು ಅನುಭವಿಸುತ್ತೇವೆ. ನಾಲಿಗೆಯ ಮೂಲಕ, ನಾವು ಕಹಿ ವಿಷದ ರುಚಿ ನೋಡುತ್ತೇವೆ. ಮೂಗಿನ ಮೂಲಕ, ನಾವು ಸಾವಿನ ಕೊಳೆತ ವಾಸನೆ ನೋಡುತ್ತೇವೆ.
ಈ ಕೊಳಕುಗಳನ್ನು ತೊಳೆಯಲು, ಕತ್ತಲೆಯನ್ನು ಹಿಂದಕ್ಕೆ ತಳ್ಳಲು ಮತ್ತು ನಮ್ಮ ಸುತ್ತಲಿನ ಪ್ರಪಂಚವನ್ನು ಬದಲಾಯಿಸಲು ದೇವರು ನಮಗೆ ಯಾವ ಸಾಧನಗಳನ್ನು ನೀಡುತ್ತಾನೆ?
ಮೊದಲನೆಯದಾಗಿ, ನಾವು ಈಗಾಗಲೇ ಚರ್ಚಿಸಿದಂತೆ, ಆತನು ಬೈಬಲ್ನಲ್ಲಿ ನಮ್ಮ ಜೀವನದ ಯೋಜನೆಯನ್ನು ಬಹಿರಂಗಪಡಿಸಿದ್ದಾನೆ. ಬೈಬಲ್ನ ಪಠ್ಯವನ್ನು ಓದುವ ಮೂಲಕ ಮತ್ತು ಅದರೊಳಗಿರುವ ದೇವರ ವಾಗ್ದಾನಗಳ ನಿಧಿಯನ್ನು ಕಾಪಾಡುವ ಮೂಲಕ, ನಾವು ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತೇವೆ ಮತ್ತು ನಮ್ಮ ಹೃದಯಗಳನ್ನು ಬಲಪಡಿಸುತ್ತೇವೆ.
ಎರಡನೆಯದಾಗಿ, ಆತನು ನಮ್ಮೊಳಗೆ ಪವಿತ್ರಾತ್ಮವನ್ನು ಇಟ್ಟಿದ್ದಾನೆ, ಹಾಗಾಗಿ ನಾವು ದೇವರನ್ನು ಪ್ರಾರ್ಥಿಸಬಹುದು ಮತ್ತು ಆತನು ನಮಗೆ ಪ್ರತಿಕ್ರಿಯಿಸುವುದನ್ನು ಅನುಭವಿಸಬಹುದು. ಇದು ನಮ್ಮ ನಂಬಿಕೆಯನ್ನು ಗಾಢವಾಗಿಸುತ್ತದೆ ಮತ್ತು ವಿಭಿನ್ನವಾಗಿ ಬದುಕಲು ಮತ್ತು ಜಗತ್ತನ್ನು ಬದಲಿಸಲು ನಮಗೆ ಶಕ್ತಿಯನ್ನು ನೀಡುತ್ತದೆ.
ಮೂರನೆಯದಾಗಿ, ಆತನು ನಮ್ಮನ್ನು ಆರಾಧನೆಗಾಗಿಯೇ ಮಾಡಿದ್ದಾನೆ. ನಾವು ಆತನನ್ನು ಆರಾಧಿಸಿದಾಗ, ಆತನು ನಮ್ಮ ಆಸೆಗಳನ್ನು ಪೂರೈಸುತ್ತಾನೆ ಮತ್ತು ಈ ಪ್ರಪಂಚವು ನಮಗೆ ನೀಡುವ ಗಾಯಗಳನ್ನು ಗುಣಪಡಿಸಲು ಪ್ರಾರಂಭಿಸುತ್ತಾನೆ.
ನಾಲ್ಕನೆಯದಾಗಿ, ಆತನು ನಮ್ಮನ್ನು ಆತನು ನೀಡಿದ ಜನರು, ಪ್ರಾಣಿಗಳು ಮತ್ತು ಪ್ರಪಂಚವನ್ನು ಎಲ್ಲೆ ಮೀರದೆ ಆನಂದಿಸುವಂತೆ ಮತ್ತು ಪ್ರೀತಿಸುವಂತೆ ಮಾಡಿದ್ದಾನೆ. ನಾವು ಇತರ ಜನರೊಂದಿಗೆ ಇರಲು ಮತ್ತು ನೈಸರ್ಗಿಕ ಪ್ರಪಂಚವನ್ನು ಆನಂದಿಸಲು ಆದ್ಯತೆ ನೀಡಬೇಕು.
ದೇವರನ್ನು ನಂಬುವ ಮತ್ತು ನಾವು ಆತನನ್ನು ಪ್ರೀತಿಸುವ ರೀತಿಯಲ್ಲಿಯೇ ಆತನನ್ನು ಪ್ರೀತಿಸುವ ಇತರ ಜನರೊಂದಿಗೆ ಸಮಯ ಕಳೆಯಲು ನಾವು ಆದ್ಯತೆ ನೀಡಬೇಕು. ಇದು ನಮ್ಮನ್ನು ಉತ್ತೇಜಿಸುತ್ತದೆ ಮತ್ತು ಬಲಪಡಿಸುತ್ತದೆ, ನಮ್ಮನ್ನು ಅಸಮತೋಲನದಿಂದ ದೂರವಿಡುತ್ತದೆ. ಇದನ್ನೇ ಚರ್ಚ್ ಎಂದು ಕರೆಯಲಾಗುತ್ತದೆ. ಚರ್ಚ್ ನಾವು ಭೇಟಿಯಾಗುವ ಒಂದು ಕಟ್ಟಡವಲ್ಲ, ಅಥವಾ ನಾವು ಹಾಜರಾಗುವ ಒಂದು ಸೇವೆಯಲ್ಲ; ಚರ್ಚ್ ಎಂದರೆ ದೇವರು ಮತ್ತು ನಮ್ಮನ್ನು ಪ್ರೀತಿಸುವ ಜನರು. ದೇವರನ್ನು ಪ್ರೀತಿಸುವ ಇತರ ಜನರೊಂದಿಗೆ ಸಮಯ ಕಳೆಯುವುದು (ಬೈಬಲ್ ಓದುವುದು, ಪ್ರಾರ್ಥಿಸುವುದು, ಆರಾಧಿಸುವುದು ಮತ್ತು ಆತನು ಬೈಬಲ್ನಲ್ಲಿ ಹೇಗೆ ಜೀವಿಸಬೇಕೆಂದು ಹೇಳಿದ್ದಾನೋ ಹಾಗೆ ಬದುಕಲು ಪರಸ್ಪರ ಸಹಾಯ ಮಾಡುವುದು) ಅತ್ಯಗತ್ಯ.
ಇತರ ಕ್ರೈಸ್ತರನ್ನು ಭೇಟಿಯಾಗುವುದು ಮುಖ್ಯವೇ ಎಂದು ಅನೇಕರು ಆಶ್ಚರ್ಯಪಡುತ್ತಾರೆ. ಆದರೆ ಬೈಬಲ್ ಅದೇ ಅತಿ ಮುಖ್ಯ ವಿಷಯ ಎಂದು ಹೇಳುತ್ತದೆ. ಪ್ರೀತಿಯ ಒಂದು ಸಮುದಾಯವನ್ನು ನಿರ್ಮಿಸಲು ಯೇಸು ಮತ್ತೆ ಬದುಕಿ ಬಂದನು: ಆತನಲ್ಲಿ ಶುದ್ಧೀಕರಿಸಲ್ಪಟ್ಟ ಮತ್ತು ಆತನಿಂದ ತೃಪ್ತಗೊಂಡ ಸಮುದಾಯ. ಸಾವಿನಿಂದ ಎದ್ದು ಬಂದ ನಂತರ ಆತನು ತನ್ನ ಸ್ನೇಹಿತರೊಂದಿಗೆ ಕುಳಿತು ಊಟಮಾಡಿದಾಗ, ಅವರೊಂದಿಗೆ ನಡೆದಾಡಿದಾಗ ಮತ್ತು ಅವರ ಖಾಸಗಿ ಕೋಣೆಗಳಲ್ಲಿ ಅವರನ್ನು ಭೇಟಿ ಮಾಡಿದಾಗ ಅವನು ತನ್ನ ನಡವಳಿಕೆಯಲ್ಲಿ ಇದನ್ನು ನಿರೂಪಿಸಿದನು.
ಅದು ನಮಗೆ ಸಾಲದಿದ್ದರೆ, ಪಾದ್ರಿಯೊಬ್ಬರು ಹೇಳಿದ ಈ ಉತ್ತೇಜಕ ಕಥೆಯು ನಮಗೆ ಸಹಾಯ ಮಾಡಬಹುದು:
ಒಂದು ದಿನ, ಒಬ್ಬ ವ್ಯಕ್ತಿ ಪಾದ್ರಿಯ ಬಳಿಗೆ ಬಂದು, "ತಂದೆ, ನನ್ನ ಸಹೋದರನಾದ ಪೌಲನು, ನನ್ನಿಂದ ಮತ್ತು ಇತರ ಕ್ರೈಸ್ತರಿಂದ ದೂರಾಗಿದ್ದಾನೆ. ನೀವು ಅವನೊಂದಿಗೆ ಮಾತನಾಡಬೇಕು ಮತ್ತು ಹಿಂತಿರುಗಬೇಕೆಂದು ಅವನಿಗೆ ಮನವರಿಕೆ ಮಾಡಿಸಬೇಕು!" ಎಂದು ಹೇಳುತ್ತಾನೆ.
ಪಾದ್ರಿ ಪೌಲನ ಮನೆಗೆ ಹೋಗಿ ಬಾಗಿಲು ತಟ್ಟಿದಾಗ, ಆತನಿಗೆ ಪ್ರವೇಶಿಸಲು ಹೇಳಲಾಯಿತು.
ಒಳಗೆ ಬಂದಾಗ ಪೌಲನು ಉರಿಯುತ್ತಿರುವ ಬೆಂಕಿಯನ್ನು ದಿಟ್ಟಿಸುತ್ತಿರುವುದನ್ನು ಪಾದ್ರಿ ನೋಡಿದನು. ಇಬ್ಬರೂ ಮೌನವಾಗಿ ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ಪಾದ್ರಿ ಪೌಲನ ಪಕ್ಕದಲ್ಲಿ ಕುಳಿತು ಬೆಂಕಿಯನ್ನು ನೋಡತೊಡಗಿದನು. ಸ್ವಲ್ಪ ಸಮಯದ ನಂತರ, ಪಾದ್ರಿಯು ಲೋಹದ ಇಕ್ಕುಳ ಎತ್ತಿಕೊಂಡು, ಬೆಂಕಿಯಿಂದ ಬಿಸಿ-ಬಿಸಿ ಕಲ್ಲಿದ್ದಲನ್ನು ತೆಗೆದು, ಬೆಂಕಿಯ ಹೊರಗೆ ಕಲ್ಲಿನ ನೆಲದ ಮೇಲೆ ಇರಿಸಿದನು. ನಂತರ ಪೌಲನನ್ನು ನೋಡಿ, ತಲೆಯಾಡಿಸಿ, ಮುಗುಳ್ನಕ್ಕು, ಕಾಯತೊಡಗಿದನು. ಕೆಲವು ನಿಮಿಷಗಳ ನಂತರ, ಕಲ್ಲಿದ್ದಲು ಎಷ್ಟು ತಣ್ಣಗಾಯಿತು ಎಂದರೆ ಅದರಲ್ಲಿ ಬೆಂಕಿಯೇ ಉಳಿದಿರಲಿಲ್ಲ.
ಪಾದ್ರಿ ಪೌಲನನ್ನು ನೋಡಿ, ತಲೆಯಾಡಿಸಿ, ಕಲ್ಲಿದ್ದಲನ್ನು ತೆಗೆದುಕೊಂಡು ಅದನ್ನು ಮತ್ತೆ ಬೆಂಕಿಯಲ್ಲಿ ಎಸೆದನು. ಕೆಲ ಕ್ಷಣಗಳ ನಂತರ ಮತ್ತೆ ಕಲ್ಲಿದ್ದಲು ಉರಿಯತೊಡಗಿತು. ಪಾದ್ರಿ ನಕ್ಕು, ಪೌಲನನ್ನು ಕೊನೆಯ ಸಲ ನೋಡಿ, ತಲೆಯಾಡಿಸಿ ಅಲ್ಲಿಂದ ಹೊರಟನು.
ನಾವು ಆ ಕಲ್ಲಿದ್ದಲಿನಂತೆ. ನಮ್ಮ ಸುತ್ತಲಿನ ಇತರರ ಉರಿಯುವ ಬೆಂಕಿಯಿಲ್ಲದೆ, ನಾವು ಕ್ರಮೇಣ ತಣ್ಣಗಾಗುತ್ತೇವೆ ಮತ್ತು ನಮ್ಮ ಬೆಂಕಿಯನ್ನು ಕಳೆದುಕೊಳ್ಳುತ್ತೇವೆ. ನಾವು ನಮ್ಮ ಬೈಬಲ್ಗಳನ್ನು ಓದಬೇಕು, ಪ್ರಾರ್ಥನೆ ಮತ್ತು ಆರಾಧನೆಯ ದೈನಂದಿನ ಅಭ್ಯಾಸವನ್ನು ಶ್ರದ್ಧೆಯಿಂದ ಬೆಳೆಸಿಕೊಳ್ಳಬೇಕು ಮತ್ತು ಇತರ ಕ್ರೈಸ್ತರೊಂದಿಗೆ ಸಮಯ ಕಳೆಯಲು ಆದ್ಯತೆ ನೀಡಬೇಕು, ಅದು ನಮಗೆ ಪರಸ್ಪರ ಸಂತೋಷದಿಂದ ದೇವರಿಗೆ ವಿಧೇಯರಾಗಿ ಬದುಕಲು ಸಹಾಯ ಮಾಡುತ್ತದೆ.
ನಾವು ಇದನ್ನು ಮಾಡಿದರೆ, ದೇವರು ನಮ್ಮನ್ನು ಬಲಪಡಿಸುತ್ತಾನೆ, ಉತ್ತೇಜಿಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ. ಆಗ ಆತನು ನಮ್ಮಂತೆಯೇ ಶುಭಸಂದೇಶದ ಅಗತ್ಯವಿರುವ ಜನರೊಂದಿಗೆ ಅದನ್ನು ಹಂಚಿಕೊಳ್ಳಲು ಅವಕಾಶಗಳನ್ನು ನೀಡುತ್ತಾನೆ.
ಇನ್ನಷ್ಟು ತಿಳಿಯಿರಿ
ಗಲಾತ್ಯರಿಗೆ 5:22-26, ಕೀರ್ತನೆ 121:1-8 ಮತ್ತು 1 ಕೊರಿಂಥಿಯರಿಗೆ 12:20 - 13:13 ಗಳನ್ನು ಓದಿ. ನಾವು ಹೇಗೆ ಬದುಕಬೇಕೆಂದು ದೇವರು ಬಯಸುತ್ತಾನೆ ಎಂಬುದು ನಿಮಗೆ ಸ್ಪಷ್ಟವಾಗಿದೆಯೇ? ಈ ಪದ್ಯಗಳಲ್ಲಿ ನೀವು ಓದಿದ ಪ್ರೀತಿಯೊಂದಿಗೆ ಬದುಕಲು ದೇವರು ನಿಮಗೆ ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿ. ಈ ರೀತಿಯ ಪ್ರೀತಿಯನ್ನು ಅಭ್ಯಸಿಸಲು ನೀವು ಪ್ರಾರಂಭಿಸಬಹುದಾದ ಒಂದು ಮಾರ್ಗ ಏನು? ಅದನ್ನು ಬರೆಯಿರಿ, ನಂತರ ಹೋಗಿ ಹಾಗೆಯೇ ಮಾಡಿ!