ಪಾಠ 3
ನಮ್ಮ ಭರವಸೆಗೆ ಇನ್ನೂ ಹೆಚ್ಚು ಮುಖ್ಯವೆಂದರೆ ಯೇಸು ಸಾವಿನಿಂದ ಸಜೀವನಾಗಿ ಎದ್ದು ಬಂದು ಶಾಶ್ವತವಾಗಿ ಜೀವಂತವಾಗಿದ್ದಾನೆ ಎಂದು ತಿಳಿಯುವುದು. ಯೇಸು ಇನ್ನೂ ಸತ್ತಿದ್ದಿದ್ದರೆ, ನಾವು ಆತನ ಜೀವನವನ್ನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ನಮ್ಮೊಳಗೆ ವಾಸಿಸುವ ಆತನ ಪವಿತ್ರಾತ್ಮವು ಆತನು ನೀಡುವ ಶ್ರೇಷ್ಠ ಕೊಡುಗೆಗಳಲ್ಲಿ ಒಂದಾಗಿದೆ.
ದೇವರೊಂದಿಗಿನ ಜೀವನವು ಸಾಧ್ಯವಾಗಿರುವುದು ಏಕೆಂದರೆ ಆತನ ಮರಣವು ಆತನ ದೃಷ್ಟಿಯಲ್ಲಿ ನಮ್ಮನ್ನು ಶುದ್ಧಗೊಳಿಸಿತು, ಆದರೆ ಅದು ನಿಜವಾಗಿರುವುದು ಆತನು ಸಾವಿನಿಂದ ಎದ್ದು ಬಂದು ಶಾಶ್ವತವಾಗಿ ಸ್ವರ್ಗದಲ್ಲಿ ಮತ್ತು ನಮ್ಮಲ್ಲಿ ಜೀವಿಸುವುದರಿಂದ. ನಾವು ಸತ್ತ ನಂತರ ಶಾಶ್ವತವಾಗಿ ಬದುಕುತ್ತೇವೆ ಎಂದು ಈ ರೀತಿಯಲ್ಲಿ ಭರವಸೆ ನೀಡಲಾಗಿದೆ, ಏಕೆಂದರೆ ನಮ್ಮ ದೋಷಪೂರಿತ ಜೀವನವನ್ನು ಕಳಚಿ ಆತನ ನಿತ್ಯ ಜೀವನವನ್ನು ಮಾತ್ರ ನಾವು ಜೀವಿಸುತ್ತೇವೆ.
ಯೇಸು ನಿಜವಾದ ದೇವರು ಮತ್ತು ನಿಜವಾಗಿಯೂ ಮನುಷ್ಯ ಕೂಡ. ಮೊದಲ ಪುರುಷ ಮತ್ತು ಮಹಿಳೆಯರಾದ ಆದಾಮ ಮತ್ತು ಹವ್ವಳರನ್ನು, ಶಾಶ್ವತವಾಗಿ ಬದುಕುವಂತೆ ಮಾಡಲಾಗಿತ್ತು, ಆದರೆ ಅವರ ದುಷ್ಟ್ ನಿರ್ಧಾರಗಳು ಅವರನ್ನು ಕೊಂದವು. ದುಷ್ಟತನ ನಮ್ಮನ್ನೂ ಕೊಲ್ಲುತ್ತದೆ. ನಾವೆಲ್ಲರೂ ಸಾಯಲು ದುಷ್ಟತನವೆ ಕಾರಣವಾಗಿದೆ, ಆದರೆ ಯೇಸು ಶಾಶ್ವತವಾಗಿ ಜೀವಿಸುತ್ತಾನೆ ಏಕೆಂದರೆ ಆತನು ಎಂದಿಗೂ ಏನೂ ದುಷ್ಟವಾದದ್ದು ಮಾಡಲಿಲ್ಲ. ಇದು ಆತನು ದೇವರೆಂದು ತೋರಿಸುತ್ತದೆ ಏಕೆಂದರೆ ದೇವರು ಮಾತ್ರ ಪರಿಪೂರ್ಣ.
ಯೇಸು ಸತ್ತರೂ, ದುಷ್ಟತನವು ಅವನನ್ನು ಕೊಲ್ಲಲಿಲ್ಲ. ಆತನು ಸ್ವಯಂಪ್ರೇರಣೆಯಿಂದ ತನ್ನ ಪ್ರಾಣವನ್ನು ತ್ಯಜಿಸಿದನು, ಮತ್ತು ಸಾವಿಗೆ ಆತನನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಏಕೆಂದರೆ ಅವನು ಎಂದಿಗೂ ತಪ್ಪು ಮಾಡಲಿಲ್ಲ. ಆತನ ಪರಿಶುದ್ಧತೆಯು ಜೀವನವನ್ನು ಮರಳಿ ತೆಗೆದುಕೊಳ್ಳುವ ಹಕ್ಕನ್ನು ಆತನಿಗೆ ನೀಡಿತು.
ಹಾಗಾಗಿ ಆತನು ಅದನ್ನೇ ಮಾಡಿದನು.
ಯೇಸುವು ತನ್ನ ಶಕ್ತಿ, ದೈವತ್ವ, ಪರಿಪೂರ್ಣ ಮಾನವೀಯತೆ ಮತ್ತು ನಮಗೆ ಜೀವವನ್ನು ನೀಡುವ ಮತ್ತು ಸಾವಿನಿಂದ ನಮ್ಮನ್ನು ಮರಳಿ ತರುವ ಸಾಮರ್ಥ್ಯವನ್ನು ತೋರಿಸುತ್ತಾ, ಪುನಃ ಬದುಕಿ ಬಂದನು.ಆದರೆ ಅದಕ್ಕಿಂತ ಹೆಚ್ಚಾಗಿ, ಆತನು ಹಿಂತಿರುಗಿದ್ದು, ನಾವು ಆತನೊಂದಿಗೆ ಶಾಶ್ವತವಾಗಿ ಸ್ನೇಹದಿಂದ ಬದುಕಲು ಸಾಧ್ಯವಾಗಲಿ ಎಂದು.
ಇದರ ಬಗ್ಗೆ ಒಂದು ಕ್ಷಣ ಯೋಚಿಸೋಣ.
ನಾವು ಎಂದಿಗೂ ಒಂಟಿಯಾಗಿರಬೇಕಾಗಿಲ್ಲ ಏಕೆಂದರೆ ಆತನು ನಮ್ಮೊಳಗೆ ವಾಸಿಸುತ್ತಾನೆ. ಪ್ರತಿ ದಿನದ ಪ್ರತಿ ಕ್ಷಣವೂ ನಮಗೆ ಆತನ ಬಳಿ ಹೋಗಲು ಅನುಮತಿಯಿದೆ. ನಾವು ಆತನನ್ನು ಪ್ರಾರ್ಥಿಸಬಹುದು ಮತ್ತು ಆತನ ಭಾವನೆಗಳು ನಮ್ಮ ಹೃದಯವನ್ನು ಕಲುಕುವುದನ್ನು ಅನುಭವಿಸಬಹುದು. ಆತನಿಗೆ ನಮ್ಮ ಆಲೋಚನೆಗಳು ತಿಳಿದಿವೆ ಮತ್ತು ಆತನು ನಮ್ಮನ್ನು ಪ್ರೀತಿಸುತ್ತಾನೆ. ಆತನು ನಮಗೆ ಶುದ್ಧವಾಗಿ ಬದುಕಲು ಶಕ್ತಿಯನ್ನು ನೀಡುತ್ತಾನೆ. ನಾವು ಆತನ ಪ್ರೀತಿ, ಸಂತೋಷ, ಶಾಂತಿ, ತಾಳ್ಮೆ, ದಯೆ, ಒಳ್ಳೆಯತನ, ನಿಷ್ಠೆ, ಸೌಮ್ಯತೆ ಮತ್ತು ಸ್ವಯಂ ನಿಯಂತ್ರಣದಲ್ಲಿ ಬದುಕಬಹುದು. ನಾವು ಆತನಲ್ಲಿ ನಮ್ಮ ಜೀವನವನ್ನು ಕಂಡುಕೊಂಡಾಗ ಆತನು ನಮಗೆ ಸಂಪೂರ್ಣ ಜೀವನವನ್ನು ನೀಡುತ್ತಾನೆ.
ನಾವು ಅಸ್ತಿತ್ವದಲ್ಲಿರುವುದಕ್ಕೆ ಕಾರಣ ಯೇಸುವಿನೊಂದಿಗೆ ನಿಕಟ ಸಂಬಂಧದಲ್ಲಿ ಜೀವಿಸುವುದಾಗಿದೆ ಎಂದು ಬೈಬಲ್ ಹೇಳುತ್ತದೆ. ಗ್ರಹದ ಇತರ ವ್ಯಕ್ತಿಗಳಿಗಿಂತ ಆತನಿಗೆ ಹೆಚ್ಚು ಹತ್ತಿರವಾಗಿ ವಾಸಿಸಲು. ಎಲ್ಲಕ್ಕಿಂತ ಮತ್ತು ಎಲ್ಲರಿಗಿಂತ ಹೆಚ್ಚಾಗಿ ಆತನನ್ನು ಪ್ರೀತಿಸಲು. ಮತ್ತು ಸಂತೋಷದಿಂದ ಆತನನ್ನು ಪಾಲಿಸಲು ಮತ್ತು ಶಾಶ್ವತವಾಗಿ ಆರಾಧಿಸಲು.
ನಾವು ಯೇಸುವನ್ನು ಪ್ರೀತಿಸಲು ಮತ್ತು ಆತನೊಂದಿಗೆ ಜೀವಿಸಲೆಂದೇ ಇರುವ ಕಾರಣದಿಂದಾಗಿ, ಬೈಬಲ್ ಕ್ರೈಸ್ತರನ್ನು "ಕ್ರಿಸ್ತನ ವಧು" ಎಂದು ಕರೆಯುತ್ತದೆ. ಆತನನ್ನು ನಿರಾಕರಿಸುವ ಎಲ್ಲರನ್ನೂ ಖಂಡಿಸಲಾಗುತ್ತದೆ ಎಂದು ಸಹ ಬೈಬಲ್ ಹೇಳುತ್ತದೆ. ನಮ್ಮ ಗುರಿ ಯೇಸುವಿನ ಅಪ್ಪುಗೆಯಲ್ಲಿ ಸೇರುವುದು . ಯೇಸುವನ್ನು ದ್ವೇಷಿಸುವ ಯಾರೂ ಆತನ ಅಪ್ಪುಗೆಯಲ್ಲಿ ಸೇರುವುದಿಲ್ಲ; ಬದಲಿಗೆ, ಅವರು ಆತನಿಂದ ಶಾಶ್ವತವಾಗಿ ಬೇರ್ಪಡುತ್ತಾರೆ.
ಇದು ಕೆಲವರಷ್ಟೇ ಊಹಿಸಬಹುದಾದ ಭಯಾನಕತೆ. ನಮಗೆ ಸಿಕ್ಕಿರುವ ಜೀವನ ಅಥವಾ ಸಂತೋಷವು ದೇವರಿಂದ ಬಂದಿದೆ ಎಂದು ಹಲವರು ಅರಿತಿರುವುದಿಲ್ಲ. ಜೀವನದಲ್ಲಿ, ನಮಗೆ ಸರಳ ಸಂತೋಷಗಳು ಲಭ್ಯವಿವೆ, ಏಕೆಂದರೆ ಆತನು ನಮಗದನ್ನು ನೀಡಿದ್ದಾನೆ. ನಾವು ಸತ್ತಾಗ, ಅದೆಲ್ಲವನ್ನೂ ಕಿತ್ತುಕೊಳ್ಳಲಾಗುತ್ತದೆ ಮತ್ತು ಒಂದೋ ನಾವು ಯೇಸುವಿನೊಂದಿಗೆ ಅಂತ್ಯವಿಲ್ಲದ ಸಂತೋಷವನ್ನು ಪಡೆಯುತ್ತೇವೆ ಅಥವಾ ಆತನಿಂದ ಬೇರ್ಪಟ್ಟು ಸಂಕಟಗಳ ಭಯಾನಕತೆಯನ್ನು ಪಡೆಯುತ್ತೇವೆ.
ಯೇಸುವಿನ ಅಪ್ಪುಗೆಯು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ತಾಣವಾಗಿದೆ ಎಂದು ನಾವು ನೋಡಲಾರಂಭಿಸುತ್ತೇವೆ. ನಾವು ಈಗ ಆತನೊಂದಿಗೆ ಶಾಂತಿಯುತ ಜೀವನವನ್ನು ಅನುಭವಿಸಬಹುದು ಎಂಬುದು ಜೀವನದಲ್ಲಿನ ಅತ್ಯಂತ ಸಂತೋಷಕರ ವಿಷಯವಾಗಿದೆ. ಯೇಸುವಿನೊಂದಿಗೆ ನಿಜವಾದ ಸಾಮೀಪ್ಯದಲ್ಲಿ ಬದುಕಿದ ಯಾವುದೇ ವ್ಯಕ್ತಿಯು ಆತನು ಎಲ್ಲಕ್ಕಿಂತ ಉತ್ತಮನೆಂದು ನಿಮಗೆ ತೋರಿಸುತ್ತಾನೆ.
ಮೊತ್ತಮೊದಲು, ಆತನನ್ನು ನಮ್ಮ ಆತ್ಮಕ್ಕೆ ಪ್ರವೇಶಿಸಲು ಬಿಡುವುದು ಭಯಂಕರವೆಂದು ಭಾಸವಾಗುತ್ತದೆ ಏಕೆಂದರೆ ಆತನು ನಮ್ಮ ದುಷ್ಟತನವನ್ನು ಬಹಿರಂಗಪಡಿಸುತ್ತಾನೆ ಮತ್ತು ಶರಣಾಗುವಂತೆ ನಮ್ಮನ್ನು ಒತ್ತಾಯಿಸುತ್ತಾನೆ. ಆದರೆ ನಾವು ಶರಣಾಗುತ್ತಿದಂತೆ, ಆತನು ಮಧುರ ಗುಣಪಡಿಸುವಿಕೆಯನ್ನು ನೀಡುತ್ತಾನೆ ಮತ್ತು ಸಹಿಸಿಕೊಳ್ಳಲು ಮತ್ತು ಬೆಳೆಯಲು ನಮಗೆ ಶಕ್ತಿಯನ್ನು ನೀಡುತ್ತಾನೆ.
ನೀವು ಯೇಸುವನ್ನು ಹಿಂಬಾಲಿಸಿದರೆ ಮತ್ತು ಆತನಿಗೆ ಶರಣಾದರೆ, ಆತನು ನಿಮ್ಮ ಪರಮ ಸಂತೋಷವಾಗುತ್ತಾನೆ ಮತ್ತು ನಿಮ್ಮ ಜೀವನವನ್ನು ಬದಲಾಯಿಸುತ್ತಾನೆ ಮತ್ತು ನಿಮ್ಮನ್ನು ಶುದ್ಧೀಕರಿಸುತ್ತಾನೆ.
ಆಗ, ನೀವು ಸತ್ತ ನಂತರ, ಆತನ ಅಪ್ಪುಗೆಯಲ್ಲಿ ಸ್ವರ್ಗಕ್ಕೆ ಸೇರುವಿರಿ.
ಇನ್ನಷ್ಟು ತಿಳಿಯಿರಿ
ರೋಮಾಪುರವವರಿಗೆ 1:1-7, 1 ಕೊರಿಂಥದವರಿಗೆ 15:1-5 ಮತ್ತು ರೋಮಾಪುರವವರಿಗೆ 10:9-10 ಗಳನ್ನು ಓದಿ. ಪುನರುತ್ಥಾನ ಸಂಭವಿಸಿದ ನಂತರ ಪುನರುತ್ಥಾನದ ಕುರಿತಾದ ವಿವರಗಳು ಇವು. ನಂತರ ದಾನಿಯೇಲನು 12:2, ಯೋಬನ ಗ್ರಂಥ 19:23-27, ಯೆಶಾಯ 26:19-21, ಹೋಶೇಯ 6:1-2, ಅರಣ್ಯಕಾಂಡ 21:9 (ಈ ಉಲ್ಲೇಖವನ್ನು ಅರ್ಥಮಾಡಿಕೊಳ್ಳಲು ಯೋಹಾನ 3:14-15 ಅನ್ನು ಸಹ ಓದಿ), ಕೀರ್ತನೆ 16:9-10, ಮತ್ತು ಕೀರ್ತನೆ 741:19, ಇವನ್ನು ಓದಿ. ಇವು ಯೇಸು ಭೂಮಿಗೆ ಕಾಲಿಡುವ ಮುಂಚೆಯೇ ಬರೆಯಲ್ಪಟ್ಟ ಯೇಸುವಿನ ಪುನರುತ್ಥಾನ ಮತ್ತು ಆತನಿಗೆ ನಂಬಿಕಸ್ತರಾಗಿ ಸಾಯುವವರ ಕುರಿತಾದ ವಿವರಗಳು. ಯೇಸುವಿನ ಪುನರುತ್ಥಾನವು ನಿಮಗೆ ಏನನ್ನು ಸೂಚಿಸುತ್ತದೆ ಮತ್ತು ಆತನು ಸಾವಿನಿಂದ ಎದ್ದು ಬಂದದ್ದು ಏಕೆ ಮುಖ್ಯ ಎಂದು ನೀವು ಭಾವಿಸುತ್ತೀರಿ ಎಂಬುದನ್ನು ಬರೆಯಿರಿ. ನಿಮ್ಮಲ್ಲಿ ಪ್ರಶ್ನೆಗಳು ಇದ್ದರೆ, ಅವುಗಳ ಬಗ್ಗೆ ಇನ್ನೊಬ್ಬ ಕ್ರೈಸ್ತನೊಂದಿಗೆ ಮಾತನಾಡಿ.